ನಾಡಹಬ್ಬ ದಸರಾ ಉದ್ಘಾಟನೆಗೆ ಕ್ಷಣಗಣನೆ: ನಾಳೆ ಬೆಳಗ್ಗೆ ಶುಭ ವೃಶ್ಚಿಕ ಲಗ್ನದಲ್ಲಿ ಚಾಲನೆ
ಮೈಸೂರು, ಅಕ್ಟೋಬರ್ 14: ವಿಶ್ವವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಬೆಳಗ್ಗೆ ನಾಡ ಅಧಿದೇವತೆ ಸನ್ನಿಧಿಯಲ್ಲಿ ದಸರೆಗೆ ಚಾಲನೆ ಸಿಗಲಿದೆ. ಈಗಾಗಲೇ ಮೈಸೂರಿಗೆ ಆಗಮಿಸಿರುವ ದಸರಾ ಉದ್ಘಾಟಕ ನಾದಬ್ರಹ್ಮ ಹಂಸಲೇಖ ಅವರು ನಾಳೆ ಬೆಳಗ್ಗೆ 10.15 ರಿಂದ 10.36ರ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ಚರಿ ದೇವಿಗೆ ಪೂಜೆ ಸಲ್ಲಿಸಿ ನಾಡಹಬ್ಬ ದಸರೆಗೆ ಚಾಲನೆ ನೀಡಲಿದ್ದಾರೆ. ಹಾಗಾಗಿ ಚಾಮುಂಡಿಬೆಟ್ಟ ಹಾಗೂ ಮೈಸೂರು ಮಧುವಣಗಿತ್ತಿಯಂತೆ ಸಿದ್ದವಾಗಿದೆ.
ಈಗಾಗಲೇ ಮೈಸೂರಿಗೆ ಆಗಮಿಸಿರುವ ದಸರಾ ಉದ್ಘಾಟಕರಾದ ಹಂಸಲೇಖ ನಂಜನಗೂಡು ತಾಲ್ಲೂಕು ಸುತ್ತೂರು ಮಠಕ್ಕೆ ಭೇಟಿ ನೀಡಿ, ಸುತ್ತೂರು ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದಾರೆ. ನಾಳೆ ಬೆಳಗ್ಗೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ದಸರಾಗೆ ಚಾಲನೆ ನೀಡಲಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಸಿದ್ದತೆ ಜೋರಾಗಿ ನಡೆದಿದೆ. ಉದ್ಘಾಟನೆಗೆ ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಡಾ ಎಚ್ ಸಿ ಮಹದೇವಪ್ಪ ಸೇರಿ ಸಂಸದರು ಶಾಸಕರು ಭಾಗಿಯಾಗಲಿದ್ದಾರೆ. ನಾಳೆ ಪುಷ್ಪಾರ್ಚನೆ ಮಾಡುವ ಮಹಿಷಾಸುರ ಮರ್ಧನಿ ರೂಪದ ಚಾಮುಂಡೇಶ್ವರಿ ವಿಗ್ರಹವನ್ನು ಇಂದು ದೇಗುಲದ ಅರ್ಚಕರು ಶುಚಿಗೊಳಿಸಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಸಿದ್ದಪಡಿಸಿದ್ದಾರೆ.
ಈಗಾಗಲೇ ಚಾಮುಂಡಿ ಬೆಟ್ಟದಲ್ಲಿ ಕೊನೆ ಹಂತದ ಸಿದ್ದತೆಗಳು ನಡೆಯುತ್ತಿದ್ದು, ವೇದಿಕೆ ಸೇರಿದಂತೆ ಗಣ್ಯರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ನಾಳೆ ಭಕ್ತರಿಗೆ ದಸರಾ ಉದ್ಘಾಟನೆಯಿರುವ ಕಾರಣ ಮಧ್ಯಾಹ್ನದ ಬಳಿಕ ನಾಡದೇವಿಯ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಸಿಎಂ ಸಿದ್ದರಾಮಯ್ಯ ಕೂಡ ಹೀಗಾಗಲೇ ಮೈಸೂರಿಗೆ ಆಗಮಿಸಿದ್ದಾರೆ. ಇಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದು, ನಾಳೆ ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಲಿದ್ದಾರೆ. ಮೊದಲು ನಾಡದೇವಿಯ ದರ್ಶನ ಪಡೆದು ನಂತರ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇನ್ನು ಅರಮನೆಯಲ್ಲೂ ಸಹ ರಾಜಪರಂಪರೆಯ ಖಾಸಗಿ ದಸರೆಯ ದರ್ಬಾರ್ ಜೋರಾಗಿ ನಡೆಯಲಿದೆ. ಈ ಬಾರಿ ರಾಜ ಮನೆತನದ ದಸರೆಯಲ್ಲಿ ಭಾಗವಹಿಸಲು ಯಾರಿಗೂ ಅವಕಾಶ ಸಿಕ್ಕಿಲ್ಲ. ಮಾಧ್ಯಮ ಸಾರ್ವಜನಿಕರಿಗೂ ನಿರ್ಬಂಧ ವಿಧಿಸಲಾಗಿದೆ. ನಾಳೆ ಬೆಳಗ್ಗೆ 5 ಗಂಟೆಯಿಂದಲೇ ಅರಮನೆಯಲ್ಲಿ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ಹೋಮ, ಹವನಗಳು ನಡೆಯಲಿವೆ. ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಂಕಣಧಾರಣೆ ಮಾಡಿಕೊಂಡು ಸಿಂಹಾಸನಕ್ಕೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
Post a Comment